Saturday, 30 October 2021

ಅಪ್ಪು❤️Puneeth Rajkumar ❤️️Master Lohith

ಅಪ್ಪು..❤

"ಯಾರಿವನು?"

ನಿನ್ನೆ ಬೆಳಿಗ್ಗೆವರಗೂ ಈ ಹೆಸರನ್ನ ಯಾರೆ ಕೇಳಿದ್ದ್ರೂ ಮುಖದಲ್ಲಿ ಒಂದು ದೊಡ್ಡ ಮಂದಹಾಸ ಇರೋದು..☺ ಅದೆ ಮಧ್ಯಾಹ್ನದ ಮೇಲೆ ಎಲ್ಲಾರ ಮುಖದಲ್ಲೂ ಹೇಳೋಕೆ ಆಗ್ದೆ ಇರೋ ಸಂಕಟ ಆವರಿಸಿತ್ತು..😥 ನಿನ್ನೆ ಅಂದ್ರೆ ೨೯.೧೦.೨೦೨೧ ಬೆಳಿಗ್ಗೆ ಹೃದಯಾಘಾತದಿಂದ ಹೋಗ್ಬಿಟ್ಟ್ರು.. ಅವ್ರು ಹೋದ್ರು, ಆದ್ರೆ ನಮಗೆಲ್ಲಾ ಇಷ್ಟು ಕಷ್ಟ ಆಗ್ತಿದೆ, ಮನಸ್ಸಿಗೆ ಹಿಂಸೆ ಆಗ್ತಿದೆ, ಅಳು ಬರ್ತಿದೆ..😭 ಯಾಕೆ?? 

ನಂಗೆ ಮತ್ತೆ ನನ್ನ ಥರ ಸಿನಿಮಾ ಹುಚ್ಚು ಇರೋ ಕೋಟ್ಯಾಂತರ ಜನಕ್ಕೆ ಅಳು ಬರುತ್ತೆ ಒಪ್ಪ್ಕೋತೀನಿ.. ಆದರೆ ತೀರಾ ಅಪರೂಪಕ್ಕೆ ಸಿನಿಮಾ ನೋಡೋ ಜನ, ಸಿನಿಮಾನೇ ನೋಡದೆ ಇರೋ ಜನ ಎಲ್ಲಾರು ಇಷ್ಟು ಹಿಂಸೆ ಅನುಭವಿಸ್ತಾ ಇದಾರೆ ಅಂದ್ರೆ ಇದು ಕೇವಲ ಅಪ್ಪುವಿನ ಸಿನಿ ಪ್ರಯಾಣದಿಂದ ಗಳಿಸಿದ ಹಿರಿಮೆ-ಪ್ರಶಂಸೆ ಅದಷ್ಟೇ ಅಲ್ಲ.. ಅಪ್ಪುವಿನಲ್ಲಿದ ಸರಳತೆ, ಎಲ್ಲರಲ್ಲೂ-ಎಲ್ಲದರಲ್ಲೂ ಸಮಾನತೆ ಕಾಣುವ ಹೃದಯ, ತಗ್ಗಿ-ಬಗ್ಗಿ ನಡೆಯುವ ಗುಣ, ಸಹಾಯ ಮಾಡಿ ಅದರ ಬಗ್ಗೆ ಎಲ್ಲೂ ಹೇಳ್ಕೋಳ್ದೆ ಇರೋ ಬುದ್ಧಿ, ಎಲ್ಲರಿಗೂ ಕೊಡ್ತಿದ್ದ ಮರ್ಯಾದೆ, ಯಾವತ್ತಿಗೂ ನಾನು ಕಿರಿಯ ಅನ್ನೋ ಆ ತನ, ಹೊಸದನ್ನ ಕಲಿಯೋ ಉತ್ಸಾಹ, ಅಭಿಮಾನಿಗಳನ್ನ ಯಾವತ್ತೂ ಬಿಟ್ಟುಕೊಡದೇ ಇರೋ ಆ ದೊಡ್ಡ ಗುಣ, ಇದೆಲ್ಲಾದ್ರ ಜೊತೆಗೆ ಅಪ್ಪುನಾ ಯಾರು ಬರೀ ಅಣ್ಣಾವ್ರ ಮಗ ಅಂತ ಅಷ್ಟೇ ಅನ್ಕೊಂಡಿಲ್ಲ.. ನಮ್ಮ ಮನೆ ಮಗ ಅಂತಾನೆ ಅನ್ಕೊಂಡದಾರೆ, ಎಷ್ಟೋ ಜನಕ್ಕೆ ಒಬ್ಬ ಅಣ್ಣನ ಥರ ಕಾಣ್ತಾರೆ, ಸ್ನೇಹಿತನಾಗಿ ಇದಾರೆ, ಆರಾಧ್ಯ ದೈವ ಆಗಿದಾರೆ..🙏

ಇಷ್ಟಕ್ಕೂ ಅಪ್ಪುಗೆ ಹೃದಯಾಘಾತ💔 ಅನ್ನೋ ವಿಷಯಾನೇ ನಮಗೆಲ್ಲಾ ಆಘಾತ, ಅಷ್ಟು ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ವ್ಯಕ್ತಿ, ಫಿಟ್ನೆಸ್ ಬಗ್ಗೆ ಅರಿವು ಮೂಡಿಸ್ತಾ ಇದ್ದ ವ್ಯಕ್ತಿ, ಜಿಮ್ನಲ್ಲಿ🏋 ವ್ಯಾಯಾಮ ಮಾಡೋ ಟೈಮಲ್ಲೆ ಹೃದಯಾಘಾತದಿಂದ ವಿಧಿವಶರಾಗಿದ್ದು ನಿಜವಾಗಲೂ ಪರಮಾಶ್ಚರ್ಯ..😐 ಎಲ್ಲಾ ಜನರು ವಿಧಿಯ ಕ್ರೂರತೆಯನ್ನು ಶಪಿಸುತ್ತಲೆ ಈ ಬೇಡದ ಸುದ್ದಿಯನ್ನು ಅರಗಿಸಿಕೊಳ್ಳಲಾಗದೆ ಒದ್ದಾಡುತ್ತಾ ಇದ್ದರು.. ಒಬ್ಬ ಹಿರಿಯ ಜೀವಿ ಹೇಳಿದ ಮಾತು ಎಲ್ಲರ ಮನಕಲುಕುವ ಹಾಗಿದೆ, ಅವ್ರು ಹೇಳಿದ್ದು " ಎಷ್ಟೋ ಒಳ್ಳೆ ಕೆಲಸ ಮಾಡ್ತಾ ಇದ್ದ ಆ ನನ್ನಪ್ಪ, ಒಂದು ಚೂರು ಗಲಾಟೆ ಇಲ್ಲ, ಅಹಂಕಾರ ಇಲ್ಲ, ಮಗು ಥರ ಯಾವಾಗ್ಲೂ ನಗ್ತಾ ಇರೊವ, ಈಗ ಇಲ್ಲ ಅಂದ್ರೆ ನಂಬಕೆ ಆಗ್ತಿಲ್ಲ, ಆ ದೆವ್ರು ನನ್ನ್ ಜೀವ ತಗೊಂಡು ಆ ಮನ್ಷನ್ನ ಉಳ್ಸ್ಲಿ, ಅಂತವ್ರು ನೂರ್ ಕಾಲ ಬಾಳ್ಬೇಕು, ಅಂತ ಒಬ್ಬ್ರು ಇದ್ರೆ ಎಷ್ಟೋ ಜನಕ್ಕೆ ಜೀವನ ಸಿಗುತ್ತೆ " ಹೀಗೆ ಕೋಟ್ಯಾಂತರ ಜನ ತಮ್ಮ ನೋವನ್ನ ಹೊರಹಾಕ್ತಾ ಇದ್ರು.. ಅಷ್ಟು ಇಷ್ಟ ಎಲ್ಲರಿಗೂ ಅಪ್ಪು ಅಂದ್ರೆ..

ಅಪ್ಪು ಸಿನಿ 📽️ಜೀವನಾನೇ ಲೆಕ್ಕಕ್ಕೆ ತಗೊಂಡ್ರೆ, ಬಾಲನಟನಾಗಿ ಅಪ್ಪು ಮಾಡಿದ ವಿವಿಧ ಬಗೆಯ ಚಿತ್ರಗಳು, ಆ ಚಿಕ್ಕ ವಯಸ್ಸಿನಲ್ಲೇ ಹಾಡಿದ ರೀತಿ, ಘಟಾನುಘಟಿಗಳ ಮುಂದೆ ಮಾಡಿದ ಅಭಿನಯ, ಈ ಅವಕಾಶ ಎಲ್ಲಾ ಬಾಲನಟ-ನಟಿಯರಿಗೆ ಸಿಗೋದು ತುಂಬಾ ವಿರಳ.. ಅದ್ರಲ್ಲಿ ಅಪ್ಪು "ಭಾಗ್ಯವಂತ"ನೆ ಸರಿ, "ವಸಂತಗೀತ"ದ ಆ ಮದ್ದು ಅಭಿನಯ, 🚊🚂🚃🚃ಭಾಗ್ಯವಂತ ಚಿತ್ರದ ಆ ಮುಗ್ಧ ಕೃಷ್ಣನ್ನ ಈಗ್ಲೂ ಕಣ್ಣಲ್ಲಿ ನೀರು ಹಾಕ್ದೆ ನೋಡೋ ಧೈರ್ಯ ಯಾರಿಗಾದರೂ ಇದಿಯಾ?? ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಅಮ್ಮ ಸೀತಮ್ಮ ಹಾಡುಗಳು, 
☁️☁️ಚಲಿಸುವ ಮೋಡಗಳು, ನನ್ನ ಹೆಸರು ರಾಮು, ದೊಡ್ಡವಾನಾದ್ಮೇಲೆ ರಾಮ್ ಪ್ರಸಾದ್ ಅಂತ ಇಟ್ಕೋತಿನಿ, ಕಾಣದಂತೆ ಮಾಯವಾದನು,
🌺 ಬೆಟ್ಟದ ಹೂವು ಚಿತ್ರದಲ್ಲಿ ರಾಮಾಯಣ ಪುಸ್ತಕನ ಕೊಳ್ಳೋಕೆ ಆಗ್ದೆ ಒದ್ದಾಡೋ ಆ ಅಸಹಾಯಕ ಪಾತ್ರಕ್ಕೆ ಬಂದ ರಾಷ್ಟ್ರಪ್ರಶಸ್ತಿ, ⭐⭐ ಎರಡು ನಕ್ಷತ್ರಗಳು, ಆಗ್ಲೆ ದ್ವಿಪಾತ್ರದಲ್ಲಿ ಮಾಡಿದ ಅಭಿನಯ, ನಾರಾಯಣನನ್ನೆ ನರಸಿಂಹಾವತಾರದಲ್ಲಿ ಧರೆಗೆ ಕರೆಸಿಕೊಳ್ಳುವ ಭಕ್ತ ಪ್ರಹ್ಲಾದ 🙏, ಯಾರಿವನು?🤔 ಚಿತ್ರದ ಸಾಹಸ.. ಹೀಗೆ ಒಂದಾ ಎರಡಾ.. ಬಾಲನಟನಾಗಿ ಅಪ್ಪು ಮಿಂಚಿರೋ✨ ಥರ ಯಾರು ಮಿಂಚೋಕೆ ಆಗಲ್ಲ ಅಂತ ಅನ್ಕೋತಿನಿ.. ತುಂಬಾ ಜನಕ್ಕೆ ಅಪ್ಪು ಪೂರ್ಣ ಪ್ರಮಾಣದ ನಾಯಕ ಆಗೋ ಮುಂಚೆನೇ ಕನೆಕ್ಟ್ ಆಗಿದ್ದೆ ಅವರ ಬಾಲ್ಯ ನಟನೆ ಹಾಗೂ ಚಲನಚಿತ್ರಗಳಿಂದ ಅಂತ ಅನ್ಸುತ್ತೆ..

ಅಪ್ಪು ❤️ ಚಿತ್ರದ ಮುಖಾಂತರ ನಾಯಕನಟನಾಗಿ ಶುರು ಮಾಡಿದ ಹೊಸ ಅಧ್ಯಾಯ.. ಅಪ್ಪು ಚಿತ್ರ ಯಾವುದೇ ಹೊಸ ನಾಯಕನಟನೂ ಕನಸು ಕಾಣುವಂತಹ ಪಾದಾರ್ಪಣೆಯ ಚಿತ್ರ, ಆ ಸಾಹಸ, ಆ ನೃತ್ಯ, ಆ ಅಭಿನಯ.. ಅಲ್ಲೆ ಎಲ್ಲರಿಗೂ ಗೊತ್ತಾಯ್ತು ಈ ಅಗಾಧ ಪ್ರತಿಭೆಯ ಇನ್ನೊಂದು ಮುಖ.. ಆಮೇಲೆ ಬಿಡಿ ಅಪ್ಪು ಮುಟ್ಟಿದ್ದೆಲ್ಲಾ ಚಿನ್ನ.. ಅಭಿ, ಆಕಾಶ್, ವೀರಕನ್ನಡಿಗ 💛❤️, ಅಜಯ್, ಮೌರ್ಯ, 🤴ಅರಸು, ಮಿಲನ💕, ವಂಶಿ, ರಾಜ್, ರಾಮ್, ಪೃಥ್ವಿ, ಜಾಕಿ, ಹುಡುಗರು👬👬, ಪರಮಾತ್ಮ🏔️, ಮೈತ್ರಿ, ಯಾರೆ ಕೂಗಾಡಲಿ, ರಣವಿಕ್ರಮ, ದೊಡ್ಮನೆ ಹುಡ್ಗ, ರಾಜಕುಮಾರ👑, ನಟಸಾರ್ವಭೌಮ, ಯುವರತ್ನ 💎 ಹೀಗೆ ಸಾಲು ಸಾಲು ಹಿಟ್ ಚಿತ್ರಗಳನ್ನು ಕೊಟ್ಟ ನಮ್ಮ ಪ್ರೀತಿಯ ಪವರ್ ಸ್ಟಾರ್.. ಇನ್ನೂ ದ್ವಿತ್ವ ಹಾಗೂ ಜೇಮ್ಸ್ ಚಿತ್ರಕ್ಕೆ ಕಾಯ್ತಾ ಇದ್ವಿ.. ಕಾಯ್ತಾನೆ ಇರಬೇಕು ಅಂತ ಅಪ್ಪು ನಿನ್ನೆನೇ ಹೇಳಿ ಆಯ್ತು..

ಅಪ್ಪು ಜೊತೆಗೆ ಒಂದು ಫೋಟೋ ತಗೋಬೇಕು ಅಂತ ಇದ್ದ ಒಂದು ಕನಸು ಇನ್ನು ಕನಸಾಗೆ ಉಳಿತು.. ಆದ್ರೆ ಎರಡು ಸಲ ಅಪ್ಪುನ ತುಂಬಾ ಹತ್ತಿರದಿಂದ ನೋಡಿದಿನಿ.. ಈ ವಿಷಯ ನಿಮಿಗೆಲ್ಲಾ ಹೇಳ್ಲೇಬೇಕು.. ಜುಲೈ ೧೨, ೨೦೧೬ ಶಿವಣ್ಣನ ಹುಟ್ಟಿದಹಬ್ಬದ ಸಮಾರಂಭಕ್ಕೆ ಅಂತ ರಾಜ್ ಡೈನಾಸ್ಟಿ ಹುಡುಗ್ರು, ಮುಂದೆ ಬರೋ ಟಗರು ಚಿತ್ರದ ೫೫ಕೆ.ಜಿ ಕೇಕ್ ಮಾಡ್ಸಿ ಶಿವಣ್ಣನ ನಾಗವಾರ ಮನೆಗೆ ಹೋಗಿದ್ವಿ, ತುಂಬಾ ಅಭಿಮಾನಿಗಳು ಆಗ್ಲೇ ದೊಡ್ಡ ಸಾಲಲ್ಲಿ ಕಾಯ್ತಾ ನಿಂತಿದ್ರು.. ಸಾಲು ಮನೆ ಅಂಗಳದಿಂದ ನಾಗವಾರ ಸರ್ಕಲ್ ವರೆಗೂ ಇತ್ತು, ನಮ್ಮಲ್ಲಿ ಒಂದೈದಾರು ಜನ ಕೇಕ್ ನ ಕಾವಲು ಕಾಯ್ತಾ ನಿಂತಿದ್ವಿ.. ನಮ್ಮ ಎದುರು ಜನ ಸಾಲಾಗಿ ನಿಂತು ಜೈಕಾರ ಹಾಕ್ತಾ ಇದ್ದ್ರು.. ಇದ್ದಕ್ಕಿದ್ದಂತೆ ನಮ್ಮ ಬೆನ್ನ ಹಿಂದೆ ಒಂದು ಪ್ರಭೆ🌀 ಹೋದ ಹಾಗಾಯ್ತು, ಸಾಲಲ್ಲಿ ಇದ್ದ ಗಲಾಟೆ-ಜೈಕಾರ ಎಲ್ಲಾ ನಮ್ಮಗಳ ಬೆನ್ನಿನ ಕಡೆ ಹೋಯ್ತು ಏನು ಅಂತ ನೋಡ್ತಿನಿ, ಎರಡೇ ಅಡಿ ದೂರದಲ್ಲಿ ನಮ್ಮ ಅಪ್ಪು.. ಓಡಿ ಹೋಗಿ ಮಾತಾಡ್ಸಿ ಫೋಟೋ ತಗೋಬೇಕು ಅನ್ನೋ ಆಸೆ ಆದ್ರೆ ಕೇಕ್ ರಕ್ಷಣೆ ನಮ್ಮ ಜವಾಬ್ದಾರಿ ಆಗಿತ್ತು, ಅದರಿಂದ ಅಪ್ಪುನ ಕಣ್ಣ್ತುಂಬಿಕೊಂಡು ಬಾಯ್ ಬಿಟ್ಕೊಂಡ್ ನೋಡ್ತಾ ನಿಂತಿದ್ದ್ವಿ.. ಅಷ್ಟ್ರಲ್ಲಿ ಯಾರೋ ಒಬ್ಬ ಅಭಿಮಾನಿ ಓಡಿ ಹೋಗಿ ಅಪ್ಪುನ ತಬ್ಬಿಕೊಂಡ, ಸೆಕ್ಯುರಿಟಿ ಗಾರ್ಡ್ ಅವನನ್ನ ಎಳಿಯೋಕೆ ಬಂದ್ರು, ಆಗ ಅಪ್ಪು ಅವರನ್ನ ತಡೆದು,😇 ಬಂದ ಅಭಿಮಾನಿನ ಮಾತಾಡ್ಸಿ ಫೋಟೋ ತೆಗಸ್ಕೊಂಡು ಆಮೇಲೆ ಮನೆ ಒಳಗೆ ಹೋದ್ರು.. ಇದು ಒಂದು ಚಿಕ್ಕ ಘಟನೆನೇ ಇರಬಹುದು ಆದರೆ ನಮಗೆ ಹಾಗೂ ಆ ಅಭಿಮಾನಿಗೆ ಅದು ಜೀವನಪೂರ್ತಿ ಉಳಿಯೋ ಸುವರ್ಣ ಘಳಿಗೆ..🥰

ಇಷ್ಟೆಲ್ಲಾ ಇಷ್ಟ ಪಡೋ ಅಪ್ಪು ಮಲಗಿರೋ ಫೋಟೋ ನಿನ್ನೆ ಎಲ್ಲಾ ಕಡೆ ಹರಿದಾಡ್ತಾ ಇದ್ದಾಗ, ಅದನ್ನು ಮತ್ತೆ ನೋಡೋ ಧೈರ್ಯ ಬರಲಿಲ್ಲ😓.. ನಮ್ಮಮ್ಮ ಹುಡುಗರು ಚಿತ್ರದಲ್ಲಿ ಅಪ್ಪು ಕಣ್ಣಿಗೆ ಏಟು ಮಾಡ್ಕೋಂಡು ಅಭಿನಯ ಮಾಡೋವಾಗ ಹೇಳೋರು, ನಮ್ಮ ಅಪ್ಪುನಾ ಈ ಥರ ಎಲ್ಲಾ ನೋಡಕೆ ಆಗಲ್ಲಪ್ಪ.. ಅಪ್ಪು ಯಾವಾಗಲೂ ನಗತಾ ಇರಬೇಕು ಅಂತ.. ನಗುವಿನ ಒಡೆಯ ಆಗಿದ್ದ ಅಪ್ಪು, ನಮ್ಮೆಲ್ಲರ ನಗುನ ಹೀಗೆ ಆರ್ಧಕ್ಕೆ ನಿಲ್ಲಿಸಿ ಹೋಗ್ತಾರೆ ಅಂತ ಯಾವತ್ತೂ ಅನ್ಕೊಂಡಿರ್ಲಿಲ್ಲ.. ಮೊದಲನೇ ಸಲ ಅಪ್ಪು ಮೇಲೆ ತುಂಬಾ ಕೋಪ ಬರ್ತಾ ಇದೆ..😠

ಅಪ್ಪು-ಅಪ್ಪಟ ಕನ್ನಡದ ಪ್ರತಿಭೆ, ಅಪ್ಪನ ಹೆಸರು ಉಳಿಸಿದ ಅಪ್ಪನಂತೆ ಇದ್ದ ಕರ್ನಾಟಕದ ಮನೆಮಗ, "ನಿನ್ನನು ಪಡೆದ ನಾವೇ ಪುನೀತ" ಅಂತ ಈಗ ಹೇಗೆ ಹೇಳೋದು.. "ಜೊತೆಗಿರು ನೀನು ಅಪ್ಪನ ಹಾಗೆ" ಅಂತ ಹೇಳಿದ್ದು ನಿಜ ಆದರೆ ಅಪ್ಪನ ಹತ್ತಿರ ಹೋಗೋಕೆ ಯಾರ್ ಹೇಳಿದ್ದು.. ತುಂಬಾ ನೋವಿನಿಂದ, ಇನ್ನು ಮುಂದೆ ಅಪ್ಪು ಭೌತಿಕವಾಗಿ ನಮ್ಮ ಜೊತೆಗೆ ಇಲ್ಲಾ ಅನ್ನೋ ಕಹಿ ಸತ್ಯನ ಒಪ್ಪಿಕೊಳ್ಳೋ ಪರಿಸ್ಥಿತಿ ಇಡೀ ಕರುನಾಡಿಗೆ ಬಂದಿದೆ..

ಜೀವನ ನೀರಿನ ಮೇಲಿನ ಗುಳ್ಳೆಯಂತೆ, ಯಾವಾಗ ಬೇಕಾದರೂ ಗುಳ್ಳೆ ಒಡೆದುಹೋಗ್ಬಹುದು.. ಅದಿಕ್ಕೆ ಇರೋಷ್ಟು ದಿನ ಎಲ್ಲಾರ ಜೊತೆಗೆ ಚೆನ್ನಾಗಿ ಇರೋಕೆ ಪ್ರಯತ್ನ ಪಡೋಣ, ನಮಗೆ ಕೆಟ್ಟದ್ದು ಬಯಸೋರಿಗೂ ಒಳ್ಳೇದೆ ಬಯಸೋಣ, ಸಾಧ್ಯವಾದಷ್ಟು ಕೈಲಾದವರಿಗೆ ಸಹಾಯ ಮಾಡೋಣ.. ಪೂರ್ವಾಗ್ರಹ ಪೀಡಿತ ಯೋಚನೆಗಳನ್ನ ನಿಲ್ಲಿಸೋಣ, ಪ್ರತಿಯೊಬ್ಬರ ಕಷ್ಟ ಅವರಿಗೆ ಮಾತ್ರ ಗೊತ್ತಿರುತ್ತೆ.. ಆದಷ್ಟೂ ಕೂಡಿ ಬಾಳಿ ಎಲ್ಲರಿಗೂ ಸಂತೋಷ ಹಾಗೂ ಒಳ್ಳೆಯ ವಿಚಾರಗಳನ್ನು ಹಂಚೋ ಪ್ರಯತ್ನ ಮಾಡೋಣ.. 🙏🤗

ಅಪ್ಪುವಿನ ಆ ನಗು ಎಲ್ಲೆಡೆ ಹರಡಲಿ😊, ಅಪ್ಪು ಬೆಳಗಲಿ..🤗

ಲವ್ ಯೂ ❤️ಅ್ಯಂಡ್ ಮಿಸ್ ಯೂ ಅಪ್ಪು😭.......

Friday, 31 August 2018

ನಾನು ನನ್ನ ಕನಸು

ಮೊನ್ನೆ ಸಂಜೆ, ಅಂದ್ರೆ ಆಗಸ್ಟ್‌ ೨೯ ೨೦೧೮, ಆಫ಼ಿಸ್ ಮುಗ್ಸಿ ಮನೆಗೆ ಹೊರಟೆ, ಕ್ವಾಯ್sss(ಅಭಿ) ಫ಼ೋನ್ ಮಾಡಿ ಮನೆಗೆ ಬರ್ತಿನಿ ಅಂದ, ಜೋರು ಮಳೆ☔, ಮನೆಗೆ ಬರೋಷ್ಟ್ರಲ್ಲಿ ಅರ್ಧ ವದ್ದೆ, ಎಲ್ಲಾರು ಜೊತೆಯಲ್ಲಿ ಊಟಕ್ಕೆ ಹೋಗೋಣ ಅಂತ ಕಾಯ್ತಿದ್ದೆ, ಆಗ ಜಯಂತ 🍟 McDonald'sಗೆ ಹೋಗೋಣ ಅಂದ, ಸರಿ ಕಿರಣನೂ ಇದ್ದ ಎಲ್ಲಾ ಹೊರಟ್ವಿ.. ಅಲ್ಲೊಂದಷ್ಟು ವಿಚಾರಗಳು, ಅದನ್ನ ನಾನು ನೇರವಾಗಿ ಸಿಕ್ಕಾಗ್ಲೇ ಕೇಳಿ, ಇಲ್ಲಾಂದ್ರೆ ಈಗ ಬರಿತಾ ಇರೋ ಅಂಕಣ(ಅಭಿಪ್ರಾಯ) ದಾರಿ ತಪ್ಪುತ್ತದೆ😅..

ಈಗ ಮುಖ್ಯ ವಿಷಯಕ್ಕೆ ಬರೋಣ.. ಕನಸು.. ಪೃಥ್ವಿ ಫಿಲ್ಮಲ್ಲಿ ಪುನೀತ್ ಹೇಳೋ "ಕನಸು ಅಂದ್ರೆ ನಿದ್ದೆ ಮಾಡೋವಾಗ ಕಾಣೋದಲ್ಲ, ನಿದ್ದೆ ಮಾಡೋಕೂ ಬಿಡದೆ ಗುರಿ ಮುಟ್ಟೋವರಗೂ ಕಾಡುತ್ತಲ್ಲಾ ಅದು ಕನಸು".. ಆದ್ರೆ ನಾನು ಈಗ ಹೇಳೋಕೆ ಹೊರಟಿರೋದು ಈ ಡೈಲಾಗ್ನ ಶುರುವಿನಲ್ಲಿ ಬರೋ ಕನಸಿನ ಬಗ್ಗೆ🙈🙈.. ಸ್ಕೂಲ್ ಟೈಮಲ್ಲಿ, ನಮ್ಮ ಶೋಭಾ ಅರಸ್ ಮಿಸ್ ಯಾವಾಗಲೂ ಹೇಳೋರು, ಕನಸುಗಳನ್ನ ಒಂದು ಕಡೆ ಬರೆದಿಡಿ ಅಂತ.. ಹಾಗೆ ಎಲ್ಲಾ ಕನಸು ನೂರಕ್ಕೆ ನೂರು ಪ್ರತಿಶತ ನೆನಪಿರೋಲ್ಲಾ ಅಂತಾನು ಹೇಳಿದ್ದರು.. ನಮಗೆ ಎಚ್ಚರ ಆದಾಗ ನೆನಪಿರೋದು ಕೂಡ ಭಾಗಶಃ, ಆದರೆ ಕೆಲವು ಕನಸುಗಳು ನಿಜ ಜೀವನದಲ್ಲಿ ನೆಡೆದಂತೆ ಭಾಸವಾಗುತ್ತದೆ.. ಕೆಲವು ಕನಸುಗಳಿಗೆ ಲಿಂಕ್ ಕೂಡ ಇರಲ್ಲ.. ನೀವು ನಿಜ ಜೀವನದಲ್ಲಿ ನೋಡದೇ ಇರೋ ಜಾಗಗಳೆಲ್ಲಾ ಕನಸಲ್ಲಿ ಬರುತ್ತೆ ಅಂದ್ರೆ, ಕನಸು ಹಾಗು ಕನಸು ಕಾಣೋ ಮನಸ್ಸಿನ ಶಕ್ತಿ ಬಗ್ಗೆ ಅಂದಾಜು ಮಾಡಿ..

""ಯಾವುದೋ ನೆನಪಿಲ್ಲದ ಒಂದು ರೈಲ್ವೆ ನಿಲ್ದಾಣದಲ್ಲಿ ಟಿಕೇಟ್ ಗೆ ಅಂತ ಸಾಲಲ್ಲಿ ನಿಂತಿರ್ತಿನಿ, ಪ್ಲಾಟ್ ಫ಼ಾರ್ಮ್ ಗೆ ಬಂದ್ರೆ ಮಂತ್ರಿ ಮಾಲ್ ಮೆಟ್ರೋ ನಿಲ್ದಾಣ ಅದು,🚆ಟ್ರೈನ್ ಬಂತು, ಹತ್ಕೊಂಡೆ.. ಆಮೇಲೆ ನೋಡಿದ್ದ್ರೆ ಯಾವುದೋ ಫ಼ಿಲ್ಮ್ ಥಿಯೇಟರ್ ಅದು.. ಮೆಟ್ರೋ ಒಳಗೆ ಥಿಯೇಟರ್ ಅಂತ ನಂಗೂ ಕನಪ಼್ಯೂಸ್ ಆಯ್ತು.. ಆದರೆ ಕನಸ್ಸಿಗೆ ಅದೆಲ್ಲಾ ಎಲ್ಲಿ..

ಕಟ್ ಮಾಡಿದ್ರೆ, ಯಾವುದೋ ಮನೆಯಲ್ಲಿ ಹಬ್ಬದ ವಾತಾವರಣ, ಎಲ್ಲರೂ ಚಂದ್ರನನ್ನು ನೋಡಲು ಹಾತೊರೆಯುವುದು ಕಾಣುತ್ತದೆ, ಸ್ವಲ್ಪ ಸಮಯದ ನಂತರ ಯುಗಾದಿ ಸಮಯದಲ್ಲಿ ಕಾಣಿಸೋ ಥರ, ಒಂದು ಸಣ್ಣ ಎಳೆಯಷ್ಟು ಇರೋ 🌙ಚಂದ್ರ ಕಾಣಿಸುತ್ತೆ, ಎಲ್ಲಾರು ನೋಡಿ ಖುಷಿ ಪಡ್ತಾರೆ, ನಾನು ಮತ್ತೆ ಇನ್ನೊಬ್ಬ ಗೆಳೆಯ (ಜಯಂತ್ ಅಥವಾ ರಾಜು ನಾ ಸರಿಯಾಗಿ ನೆನಪಿಲ್ಲ) ಮಹಡಿ ಮೇಲಿಂದ ನೋಡೊಣ ಅಂತ ಮೇಲೆ ಹೋಗ್ತೀವಿ.. ನೋಡಿದ್ರೆ ಅಲ್ಲೊಂದು ದೊಡ್ಡ ಗಾತ್ರದ ಪೂರ್ಣ ಚಂದ್ರನಂತೆ ಆಕಾರ ಹಾಗು ಚಂದ್ರನಷ್ಟೇ ಹೊಳೆಯುವ ಮತ್ತೊಂದು ಆಕಾಶಕಾಯ🌕, ಇದೇನು ಎರಡೆರಡು ಚಂದ್ರ ಅಂತ ನನ್ನ ಗೆಳೆಯ ಹೇಳೋಷ್ಟರಲ್ಲಿ ಅದು ಸೂರ್ಯ ಯಾಕಾಗಿರಬಾರದು ಅಂತ ಇನ್ನೊಬ್ಬರು ಯಾರೋ ಹೇಳ್ತಾರೆ, ರಾತ್ರಿ ಹೊತ್ತಿನಲ್ಲಿ ಸೂರ್ಯ ಹೇಗೆ ಅದು ಕೂಡ ಚಂದ್ರನ ಹಾಗೆ ಜಾಸ್ತಿ ಪ್ರಕಾಶಮಾನವಿಲ್ಲದ ಇದೇನು ಅಂತ ವಾಗ್ವಾದ ಮಾಡ್ತಿರ್ತಿವಿ..
Sudden ಆಗಿ ಒಂದು ದೊಡ್ಡ ಗುರುತ್ವಾಕರ್ಷಣಾ ಶಕ್ತಿ (Gravitational force), ನಮ್ಮೆಲ್ಲರನ್ನೂ ಆ ಆಕಾಶಕಾಯದ ಕಡೆ ಸೆಳೆಯಲಾರಂಭಿಸುತ್ತದೆ, ಏನಾಗ್ತಿದೆ ಅಂತ ಯೋಚನೆ ಮಾಡೋಷ್ಟರಲ್ಲಿ ಎಲ್ಲಾರು ಅದರ ಕಡೆಗೆ ತುಂಬಾ ವೇಗವಾಗಿ ಹೋಗ್ತಾ ಇದ್ದಿವಿ.. ಬಸ್ಸ್ ಅಥವಾ ಟ್ರೈನಲ್ಲಿ ಹೋಗುವಾಗ ಕಿಟಕಿಯಲ್ಲಿ ನೋಡಿದಾಗ ಗಿಡಮರಗಳು ಕಾಣಿಸೋ ಥರ ನಮಗೆ ಬೇರೆ ಜನರು ಹಾಗು 🌌ನಕ್ಷತ್ರ ಪುಂಜಗಳು ಕಾಣಸಿಗುತ್ತವೆ.. ಒಂಥರಾ ಕಪ್ಪುಕುಳಿ (Black hole) ಕಡೆ ಹೋಗ್ತಿದ್ದಿವಿ ಅಂತ ಅನ್ನಿಸಿತು.. ನನ್ನ ಮೂರ್ಛೆ ತಪ್ಪುತ್ತದೆ.. ಮುಂದೇನು..

ಕಟ್ ಮಾಡಿದ್ರೆ, ಎಲ್ಲಾರು ನಿನ್ನೆ ಇದ್ದ ಜಾಗದಲ್ಲೆ ವಾಪಸು ಬಂದಿದಿವಿ.. ಸುತ್ತಮುತ್ತಲಿನ ಜನರು ನಿನ್ನೆ ನೆಡೆದ ಘಟನೆ ಬಗ್ಗೆ ಏನೇನೋ ಮಾತಾಡ್ತಾ ಇದ್ದಾರೆ ಆದರೆ ಅವರ್ಯಾರು ಅಲ್ಲಿನವರಲ್ಲ, ಆಗ ಮಹಡಿಗೆ ಅಮ್ಮನ ಫ್ರೆಂಡ್ ಲೈಸಮ್ಮ ಆಂಟಿ ಮಗ ಅನಿಲ್ ಬರ್ತಾನೆ (ನಿನ್ನೆ ಇದೇ ಮನೆಯಲ್ಲಿ ಯಾವುದೋ ಹಬ್ಬಕ್ಕಾಗಿ ನಾವು ಚಂದ್ರನ್ನ ನೋಡಿದ್ವಿ, ಇವರು ಕ್ರಿಶ್ಚಿಯನ್‌✝️, ಅವರು ಯಾವ ಚಂದ್ರನ್ನ ನೋಡೋ ಹಬ್ಬ ಮಾಡ್ತಾರೆ).. ಅವನು ನಿನ್ನೆ ಊರಲ್ಲಿ ಇರಲಿಲ್ಲ.. ಇವತ್ತು ಬೆಳಿಗ್ಗೆ ಬಂದೆ ಅಂತಾನೆ.. ನಾವು ನಿಂತಿರೋ ಮಹಡಿ ಮನೆ ಕೂಡ ಅವರದ್ದೆ ಅಂತ ಹೇಳ್ತಾನೆ.. ಅವನ ಗೆಳೆಯ ಒಬ್ಬ ಇಸ್ರೋ ಲಿ ಕೆಲಸ ಮಾಡ್ತಿದ್ದು, ಅವನು ಇಲ್ಲಿನ ವಿಷಯ ತಿಳಿದು ಅನಿಲ್ ಜೊತೆ ಬಂದಿರುತ್ತಾನೆ, ನಾವು ನಿನ್ನೆ ರಾತ್ರಿ ಏನು ನೆಡೆದಿರಬಹುದು ಅಂತ ಅವನೊಂದಿಗೆ ಡಿಸ್ಕಸ್ ಮಾಡ್ತಿವಿ.‌. ಅವನು ಎಲ್ಲೋ ಹೋಗ್ತಾನೆ.. ನಾನು ನಮ್ಮ ಮನೆಯಲ್ಲಿ ಇನ್ಸ್ಟಾಲ್ ಮಾಡಿರೋ 🔭 ಎಲೆಕ್ಟ್ರಾನಿಕ್ ಟೆಲಿಸ್ಕೋಪ್ ಅ್ಯಂಡ್ ರೆಕಾರ್ಡಿಂಗ್ ಯುನಿಟ್ ನಲ್ಲಿ ಏನಾದರೂ ದಾಖಲಾಗಿದೆಯಾ ಅಂತ ಮನೆಗೆ ಬಂದು ನೋಡ್ತಿನಿ.. ಅದನ್ನು ನೋಡಿದಾಗ ರಾತ್ರಿಯ ಸಮಯದಲ್ಲಿ ಇದ್ದಕ್ಕಿದ್ದಂತೆ ಗುರುತ್ವ ಅಲೆಗಳು ಜಾಸ್ತಿ ಆಗಿ ಅದು ಒಂದು ದೊಡ್ಡ ತರಂಗದಂತೆ ಬಂದು ಒಂದು ಲೂಪ್ ಕಂಪ್ಲೀಟ್ ಮಾಡಿರೋದು ರೆಕಾರ್ಡ್ ಆಗಿರುತ್ತೆ..   ಸ್ಪೆಕ್ಟ್ರಮ್ ನ ನೋಡಿ Wavelength ಚೆಕ್ ಮಾಡಿ, ದೂರ ಅಳೆದರೆ ಅದು ಹೆಚ್ಚು ಕಡಿಮೆ ಸೂರ್ಯನ ಹಾಗೂ ಭೂಮಿಯ ನಡುವೆಯ ಅಂತರದಷ್ಟೆ ದೂರದಿಂದ ಬಂದಿರಬಹುದು ಎಂದು ಖಾತ್ರಿಯಾಗುತ್ತದೆ.. ನನಗೆ ಅದೇನೋ ಸೋಲಾರ್ ಫ಼್ಲೇರ್ ಇಂದ ಆಗಿರಬಹುದು ಅಂದ ಅನ್ಸುತ್ತೆ.. ನಾನು ಅನಿಲ್ ಫ್ರೆಂಡ್ ಗೆ ಹೇಳೋಣ ಅಂತ ಮತ್ತೆ ಅಲ್ಲಗೆ ಹೋಗ್ತೀನಿ.. ಅನಿಲ್ ಕೇಳ್ತಾನೆ ನಾನು ಅದನ್ನು ಮತ್ತೆ ವಿವರಿಸುತ್ತೀನಿ..
"ಒಂದು ಬೃಹತ್ತಾದ ಸೋಲಾರ್ ಫ್ಲೇರ್ (Massive solar flare), ಬುಧ ಗ್ರಹವನ್ನು ಮುಟ್ಟುವಷ್ಟು ದೊಡ್ಡದು, ಅದು ಮತ್ತೆ ಸೂರ್ಯನೆಡೆಗೆ ಹೋಗುವಾಗ ಅದರ ಅಲೆ ನಮ್ಮನ್ನು ಅದರತ್ತ ಸೆಳೆಯುತ್ತದೆ.. ಆದರೆ ಅದು ವಾಪಸು ಸೂರ್ಯನೆಡೆಗೆ ಹೋಗುವಾಗ ಮತ್ತೊಂದು ಇದಕ್ಕಿಂತ ಸಣ್ಣ ಸೋಲಾರ್ ಫ್ಲೇರ್ ನಮ್ಮನು ವಿರುದ್ಧದ ದಿಕ್ಕಿನಲ್ಲಿ ಅಂದರೆ ಭೂಮಿಯ ಕಡೆಗೆ ವಾಪಸು ಕಳಿಸುತ್ತದೆ, (ಮ್ಯಾಗ್ನೆಟ್ ಪ್ರಿನ್ಸಿಪಲ್  ಥರಾನೂ ಇರಬಹುದು) ಅಂದ್ರೆ ಇದು ಒಂಥರಾ ರೆಸಲ್ಯೂಷನ್ ಆಫ಼್ ಫ಼ೋರ್ಸ್ಸಸ್ ಹಾಗೆ (Resolution of Forces)."
ಅನಿಲ್ ಇದರ ಬಗ್ಗೆ ಹೆಚ್ಚಾಗಿ ಗೊತ್ತಿಲ್ಲ ಅಂತ ಅವನ ಫ಼್ರೆಂಡ್ ನ ಕರಿತಾನೆ, ಅವ್ನಿಗೆ ಇದೆಲ್ಲಾ ಮತ್ತೆ ವಿವರಿಸುತ್ತೇನೆ.. ಆಗ ಅವನು ನಾನು ಹೇಳಿದ್ದು Partially ಸರಿ ಅಂತ ಹೇಳ್ತಾನೆ.. ಇಸ್ರೋ ಮತ್ತೆ ನಾಸಾ ಕೂಡಾ ಇದೇ ರೀತಿ ಹೇಳಿದಾಗ ನಮಗೆ ಫ಼ುಲ್ ಖುಷ್.. ನಾವು ಏನೋ ಕಂಡುಹಿಡಿದ ಫೀಲಿಂಗ್..

ಆದರೆ ಅನಿಲ್ ಫ್ರೆಂಡ್, ಇಲ್ಲೇ ಯಾಕೆ ಬಂದ, 🌍ಭೂಮಿಯ ೬೬% ಭಾಗದಲ್ಲಿ ಈ ಘಟನೆ ನೆಡೆದಿದೆ.. ಆದರೂ ಅವನು ಇಲ್ಲೆ ಬಂದಿದ್ದು ನಂಗ್ಯಾಕೊ ಅನುಮಾನ ಬಂತು.. ಇಲ್ಲೇನಾದ್ರು ವಿಷಯ ಇರಬಹುದು ಅಂತ ನೋಡಿದಾಗ.. ಸುತ್ತಮುತ್ತಲಿನ ಯಾವುದೇ ಜನರು ಇಲ್ಲಿನವರಲ್ಲ.. ಅವರೆಲ್ಲಾ ಬೇರೆ ಭಾಗದ ಜನರು ಅಂತ ನ್ಯೂಸಲ್ಲೂ ಹೇಳ್ತಾರೆ, ಇಲ್ಲಿನ ಜಾಗದ ಜನರು ಬೇರೆ ಪ್ರದೇಶದಲ್ಲಿ ದೊರಕಿದ ಮಾಹಿತಿಯನ್ನು ಕೂಡ ನ್ಯೂಸ್ನಲ್ಲಿ ಪ್ರಸಾರವಾಗುತ್ತದೆ..
ಆದರೆ ನಾವು ಮಾತ್ರ ನಿನ್ನೆ ಇದ್ದ ಜಾಗಕ್ಕೆ ಬಂದಿದಿವಿ.. ಎಲ್ಲೋ ಎನ್ನೋ ಮಿಸ್ ಹೊಡಿತಿದೆ, ಇದೆಲ್ಲಾ ಹುಡುಕಬೇಕು ಅಂತ ಜಯಂತ್ ನ ಕರೆದೆ, ಅವ್ನು ಬಂದ, ನಾನು ಅವನು ಅನಿಲ್ ಮನೆಯ ಪಕ್ಕ ಇರೋ ಒಂದು ಫ಼ಿಲ್ಡ್ ನ ಸುತ್ತ ಮುತ್ತ ಹುಡುಕ್ತಾ ಇದ್ವಿ.. ಆಗ ಅನಿಲ್ ಮನೆ ಹಿಂದೆ, ಒಂದು ದೊಡ್ಡ ನೀರಿನ sumpಗೆ ಇರೋ ಮುಚ್ಚಳದ ಥರಾ ನೆಲದಲ್ಲಿ ಒಂದು ದೊಡ್ಡ ಮುಚ್ಚಳ ಇತ್ತು.. ಅದನ್ನು ಜಯಂತ್ ತೆಗೆದ, ನೋಡಿದ್ರೆ ಅಲ್ಲಿ ನೀರಿಲ್ಲ.. ಬದಲಾಗಿ ಒಂದು ಸುರಂಗ ಮಾರ್ಗದ ರೀತಿಯಲ್ಲಿ ಜಾಗ, ಇಳಿಯಲು ಸ್ಟೀಲ್ ಏಣಿ ಇದ್ದಿದ್ದರಿಂದ ಅವನು ನಂಗೆ ಹೇಳದೆ ಇಳಿದ, ನಾನು ಅವನನ್ನು ಹುಡುಕಿ ಬಂದೆ.. ಜೋರಾಗಿ ಅವನ ಹೆಸರನ್ನು ಕೂಗಿದೆ.. ಅವನ ಧ್ವನಿ "ಬೇಗ ಬಾ ಮಂಜು, ಇಲ್ಲೇನೇನೋ ಇದೆ, ಸಖತ್ತಾಗಿದೆ" ಅಂತ ಆ ಸಂಪ್ ಕಡೆಯಿಂದ ಬಂತು.. ನಾನು ಇಳಿದೆ ನೋಡೋಣ ಅಂತ, ನೋಡಿದ್ರೆ ಅದೊಂದು ದೊಡ್ಡ (space shuttle)🚀 ಸ್ಪೇಸ್ ಶಟಲ್ ನಂತೆ, ಅದರೊಳಗೆ High end equipments, supercomputers, ಏನೇನೋ calculations.. ಆದರೆ ಜನ ಯಾರು ಇಲ್ಲ.. ನಿನ್ನೆ ನೆಡೆದ ಘಟನೆಗೂ, ಇದಕ್ಕೂ,ನಮಗೂ ಎನಾದ್ರು ಲಿಂಕ್ ಇದಿಯಾ ಅಂತ ನಾನು ಜಯಂತ್ ಮಾತಾಡ್ತಿದ್ವಿ.."" 🤔🤔🤔🤔

ಆಗ ಕಿರಣ, "ಸ್ನಾನಕ್ಕೆ ನೀರು ಇಡ್ಲಾ ಮಂಜು?" ಅಂದ..
ನಿದ್ದೆಯಿಂದ ಎದ್ದೆ.. ಪಕ್ಕದಲ್ಲೇ ಜಯಂತ ಪಂಪ್ ಡಿಸೈನ್ ಮಾಡ್ತಾ ಕೂತಿದ್ದ.. ಇದು ಕನಸು ಅಂತ ಗೊತ್ತಾಗ್ತಿದ್ದ ಹಾಗೆ ಮೊದಲು ಇದನ್ನ ಬರಿಬೇಕು ಅಂತ, ಮುಖ್ಯವಾದ ವಿಷಯಗಳನ್ನ ಒಂದು ಕಡೆ ಬರೆದಿಟ್ಟೆ.. ಊರಿಗೆ🚌 ಹೊರಟಾಗ ಪೂರ್ಣ ಮಾಡೋಣ ಅಂತ ಕೂತೆ.. ಆದರೆ ಅದು ಊರಿಂದ ವಾಪಸ್ ಬೆಂಗ್ಳೂರಿಗೆ ಬರ್ತಾ ಮುಗಿತಾ ಇದೆ 🚂.. Sep 3rd..

ಕನಸುಗಳು🌃,💭 ನಮ್ಮನ್ನು ಬೇರೆಯದೇ ಲೋಕಕ್ಕೆ ಕೊಂಡೊಯ್ಯುವ ಒಂದು ಸುಂದರ ಅನುಭವ (ಕೆಲವೊಮ್ಮೆ ಕರಾಳ, ಕನಸಿನ ಮೇಲೆ depend), ಕನಸುಗಳು ಕೂಡ ನಮ್ಮ ಆಸೆ, ಆಸಕ್ತಿ, ಇಷ್ಟ-ಕಷ್ಟ, ನಿತ್ಯ ಓಡಾಡುವ ಜಾಗ, ನಿತ್ಯ ಬೆರೆಯುವ ವ್ಯಕ್ತಿಗಳೆಲ್ಲದರ ಮೇಲೆ ಅವಲಂಬಿತ.. ಮನಸ್ಸಿನ ಹಾಗೂ ಮೆದುಳಿನ ಒಂದು ಅಗಾಧ ಶಕ್ತಿ.. ಇಂತಹ ನನ್ನದೊಂದು ಕನಸಲ್ಲಿ ನಿಮ್ಮನ್ನು ಆದಷ್ಟೂ ಕರೆದುಕೊಂಡು ಹೋಗಿ, ಎಲ್ಲವನ್ನೂ ವಿವರಿಸಿದ್ದೇನೆ ಎಂದು ಭಾವಿಸುತ್ತೆನೆ.. ನಿಮ್ಮ ಅಭಿಪ್ರಾಯ ತಿಳಿಸಲು ಮರೆಯದಿರಿ.. ನಿಮಗೆ ಇಷ್ಟ ಆಗಿದ್ರೆ ಖುಷಿ😊😊, ಇಷ್ಟ ಆಗಿಲ್ಲಾಂದ್ರೆ ಒಂದು ಕೆಟ್ಟ "ಕನಸು" ಅಂತ ಮರೆತುಬಿಡಿ..😅😅
ಆದರೆ ಅಭಿಪ್ರಾಯವನ್ನು ವ್ಯಕ್ತಪಡಿಸಿ.. ಮತ್ತೆ ಸಿಗೋಣ, ತುಮಕೂರು ಬಂತು..😁😀

Sunday, 11 February 2018

Abhipraaya.. ಅಭಿಪ್ರಾಯ..

ಅಂಕಣ ಕೂಡ ಕಳೆದ ಅಂಕಣದ ಹಾಗೆ ಸತ್ಯ ಘಟನೆ.. ಹೆಸರು ಸೂಕ್ತವಾಗಿದೆ ಅಂತ ಅನ್ಸುತ್ತೆ..
ಕೆಲಸಕ್ಕೆ ಸೇರಿ ಒಂದೆರಡು ವರ್ಷ ಆಗ್ತಿದ್ದಹಾಗೆ, ಎಷ್ಟೋ ಸಲ ನಮ್ಮ ಗೆಳೆಯ-ಗೆಳತಿಯರ ಜೊತೆ ಮಾತಾಡೋವಾಗ ಬರೋ ಸಾಮಾನ್ಯ ವಿಷಯ ಇದು.. ಮದುವೆ ಯಾವಾಗ??
ಅದಕ್ಕೆ ಉತ್ತರಗಳೂ ಕೂಡ ಸಾಮಾನ್ಯವಾಗಿ, ಈ ವರ್ಷ ಆಗುತ್ತೆ, ಜಾತಕ ಸೆಟ್ ಆಗ್ಲಿಲ್ಲ, ಗುರು ಬಲ ಇಲ್ಲ, ಹುಡುಗ/ಹುಡುಗಿ ಇಷ್ಟ ಆಗ್ಲಿಲ್ಲ, ನಮ್ಗೆಲ್ಲಾ ಯಾರು ಸಿಗ್ತಾರೋ ನೋಡೋಣ ಅಂತ ಬರುತ್ತೆ.. ಆದ್ರೆ ಕೆಲವರು (ನಮ್ಮ ವಂಶಿ, ಮ್ಯಾಡಿ) ಯಾಕೋ ಮದುವೆನೆ ಬೇಡ ಅಂತ ಕೂತಿದರೆ.. ನಮ್ಮ ಹುಡುಗ್ರಾ ಹಿಂಗೆ ಹೇಳ್ತಿರೋದು ಅಂತ ತುಂಬಾ ಸಲ ಡೌಟು ಬಂದಿದೆ ಬಿಡಿ, ಅದು ಬೇರೆ ವಿಷಯ ( ಅದರ ಬಗ್ಗೆ ತುಂಬಾ ಡಿಸ್ಸ್ಕಶನ್ ಕೂಡ ಆಗಿವೆ).. ಈ ವಿಚಾರವಾಗಿ ಎಷ್ಟೇ ಮಾತಡಿದ್ದ್ರೂ ನಮ್ಮ ಅಭಿಪ್ರಾಯನ ಅವರ ಮೇಲೆ ಹೇರಿದ ಹಾಗೆ ಆಗುತ್ತೆ.. ಅದು ಎಷ್ಟು ಸರಿ ಅಂತ ಯೋಚನೆ ಮಾಡೋ ಹೊತ್ತಿನಲ್ಲಿ ಈ ಘಟನೆ ನಡೆಯಿತು.. ಅದೂ ಕೂಡ ಕಾಕತಾಳೀಯ.. ಸರಿ ಜಾಸ್ತಿ ತಲೆ ತಿನ್ನದೇ ಮುಖ್ಯ ವಿಷಯಕ್ಕೆ ಬರ್ತಿನಿ..
ಜನವರಿ ೨೦೧೮ರ ಒಂದು ಬುಧವಾರ ಸಂಜೆ, ಆಫೀಸ್ ಕೆಲಸ ಮುಗಿಸಿ ಮೆಟ್ರೋ ಹತ್ತಿದೆ, ಯಾವಾಗಲೂ ರಾಸು (ರಾಜು) ಇರೋನು, ಇವತ್ತು ಇರಲಿಲ್ಲ.. ರಾಜಾಜಿನಗರಕ್ಕೆ ಹೋಗ್ಬೇಕಾಗಿದ್ದರಿಂದ ಮೆಜೆಸ್ಟಿಕ್ ಅಲ್ಲಿ ಇಳಿದು ಹಸಿರು ಮಾರ್ಗದ ಮೆಟ್ರೋ ಹತ್ತಬೇಕಿತ್ತು, ಆಗ ತಾನೆ ನಾಗಸಂದ್ರದ ಕಡೆ ರೈಲು ಹೋಗಿತ್ತು, ಆದರಿಂದ ಮುಂದಿನ ರೈಲಿಗೆ ಇನ್ನೂ ಎಂಟು ನಿಮಿಷಗಳ ಕಾಲ ಕಾಯಬೇಕಾಯಿತು.. ಆಗ ಯಾವುದೋ ಒಂದು ಪರಿಚಿತ ಮುಖ ನನ್ನನ್ನು ಗುರುತಿಸಿ ನಕ್ಕಿತು.. ಒಂದು ಕ್ಷಣ ಯಾರು ಅಂತ ತಿಳಿಯಲಿಲ್ಲ.. ಆದರೆ ನಮ್ಮ ಕಾಲೇಜು ಹುಡುಗ ಅಂತ ಗೊತ್ತಾಯ್ತು (ಹೆಸರು ನೆನಪಿರಲಿಲ್ಲ), ಇನ್ ಫ್ಯಾಕ್ಟ್ ಯಾವತ್ತೂ ಹೆಸರು ಕೇಳಿರಲಿಲ್ಲ.. ಮುಖ ಪರಿಚಯ ಅಷ್ಟೇ.. ಆದ್ರೂ ನಮ್ಮ ಮಾತು ಶುರು ಆಗಿದ್ದೆ ಹೇಗಿದ್ದೀಯಾ ಮಗ ಅಂತ.. ರಾಜಕುಮಾರ ಫಿಲ್ಮ್ ಅಲ್ಲಿ ಪುನೀತ್ ಹೇಳೋ "ಫ್ರೆಂಡ್ ಶಿಪ್ ಅಂದ್ರೆ ನಮ್ದೇ ರಿ ಹುಡುಗ್ರುದು" ಅನ್ನೋ ಡೈಲಾಗ್ ರಪ್ಪ್ ಅಂತ ಪಾಸಾಯ್ತು..
ಪರಸ್ಪರ ಕುಶಲೋಪರಿ ಆಯ್ತು, ಆಮೇಲೆ ಮತ್ತೆ ಮದುವೆ ಯಾವಾಗ ಅಂತ ಕೇಳ್ದೆ..
ಅವನು: ಮದುವೆ ಎಲ್ಲಾ ಆಗಲ್ಲ ಮಗಾ..
ನಾನು: ಹೌದಾ, ಯಾಕ್ ಗುರು ಏನಾಯ್ತು.??
ಅ:ಸುಮ್ನೆ ಬೇಡ ಅಂತ ಡಿಸೈಡ್ ಮಾಡಿದ್ದಿನಿ.. ನಿಂದು??
ನಾ: ನಂದು ಹುಡುಕಾಟ ಶುರು ಆಗಿದೆ.. ನಿಮ್ಮ ಮನೇಲಿ ಏನು ಹೇಳಿಲ್ವಾ ಮದ್ವೆ ಬೇಡ ಅಂದಿದಕ್ಕೆ??
ಅ: ಅವ್ರೇನು ಹೇಳಲ್ಲ.. ನಾನು ಮೊದಲೇ ಹೇಳಿದಿನಿ..
ನಾ: ಮತ್ತೆ ಊರಲ್ಲಿ ಅಮ್ಮ ಅಪ್ಪ??
ಅ: ಅಪ್ಪ ರೀಸೆಂಟ್ಲಿ ತೀರಿ ಹೋದರು.. ಈಗ ಅಮ್ಮ ಅಕ್ಕ ಇದಾರೆ..
ನಾ: ಸಾರಿ ಮಗಾ, ವಿಷಯ ಗೊತ್ತಿರಲಿಲ್ಲ.. ಹಾಗಿದ್ದ್ರೆ ಈಗಲೇ ನೀನು ಅಮ್ಮನ ಜೊತೆಯಲ್ಲಿ ಇರ್ಬೇಕು.. ಅಕ್ಕ??
ಅ: ಅಕ್ಕ, ಅಮ್ಮನ್ನ ನೋಡ್ಕೋತಾಳೆ.. ನಾನು ಬೇರೆ ಎಲ್ಲಾದರು ಸೆಟ್ಲ್ ಆಗ್ಬೇಕು..
(ಒಂದು ಕ್ಷಣ ನಂಗೆ ಏನ್ ಹೇಳಬೇಕೋ ಗೊತ್ತಾಗ್ಲಿಲ್ಲ)
ನಾ: ಎಲ್ಲಾದರೂ ಅಂದ್ರೆ ಎಲ್ಲ್ ಹೋಗ್ತಿಯಾ.. ನಮ್ಮೂರು ಬಿಟ್ಟು..
ಅ:ಗುಜರಾತ್ ಕಡೆ ಹೋಗಣ ಅಂತ.. ಇಲ್ಲಿ ಸ್ವಲ್ಪ ಸೇವಿಂಗ್ಸ್ ಮಾಡಿ, ಒಂದ್ ಹತ್ತು ವರ್ಷ ಆದ್ಮೇಲೆ ಅಲ್ಲಿಗೆ ಹೋಗ್ತೀನಿ..
ನಾ: ಅಮ್ಮ, ಅಕ್ಕ??
ಅ: ಅವ್ರು ಇಲ್ಲೆ ಇರ್ಲಿ.. ಹಾಗೆ ನೀನು ಏನಾದರೂ ಸೇವಿಂಗ್ಸ್ ಮಾಡಿದ್ದೀಯಾ ಏನು??
ನಾ: ಸೇವಿಂಗ್ಸ್ ಅಂತ ನಾನೇನು ಮಾಡಿಲ್ಲ.. ಅಮ್ಮ ನೋಡ್ಕೋತಾರೆ ಅದೆಲ್ಲಾ..
ಅಷ್ಟ್ ಹೊತ್ತಿಗೆ ಮೆಟ್ರೋ ಬಂತು, ಹತ್ಕೊಂಡ್ವಿ..
ಆಮೇಲೆ ನಂಗೇ ಹೆಚ್ಚು ಮಾತಡಬೇಕು ಅಂತ ಅನ್ಸ್ಲಿಲ್ಲ.. ಎಲ್ಲಿ ಇಳ್ಕೋಬೇಕು ಅಂತ ಕೇಳ್ದೆ.. ಕುವೆಂಪು ರಸ್ತೆ ಅಂದ.. ಸ್ಟಾಪ್ ಬಂತು ಇಳ್ಕೊಂಡ.. ಆಕ್ಚ್ಯುಲಿ ಅವನು ಶ್ರೀರಾಮಪುರ ಸ್ಟೇಷನ್ ಅಲ್ಲೇ ಇಳ್ಕೊಂಡ.. ನಾನು ಗಮನಹರಿಸಲಿಲ್ಲ.. ಕುವೆಂಪು ರಸ್ತೆ ಬಂದಾಗ ನೋಡಿದ್ದ್ರೆ ಅವ್ನು ಹಿಂದಿನ ಸ್ಟಾಪ್ ಅಲ್ಲೇ ಇಳಿದಿದಾನೆ ಅಂತ ಗೊತ್ತಾಯ್ತು..
ಪಾಪ ತುಂಬಾ ಗೊಂದಲದಲ್ಲಿದ್ದಾನೆ ಅಂತ ಅನ್ಕೊಂಡು, ಮನೆ ಕಡೆ ನೆಡ್ಕೊಂಡು ಹೊರಟೆ.. ಆಗ ಅವನು ಮಾತಾಡಿದ ಹಲವಾರು ವಿಷಯ ಯೋಚನೆಗೆ ಬಂತು.. ಮೊದಲಿಗೆ ಅವ್ನು ಮದುವೆ ಆಗಲ್ಲ ಅಂದಾಗ, ಈಗಿನ ಒಂದಷ್ಟು ಡಿಫ಼ರೆಂಟ್ ಹುಡುಗರ ತರ ಇವನಿಗೂ ಅನ್ಸಿರಬೇಕು.. ಅದ್ರಲ್ಲೇನು ತಪ್ಪಿಲ್ಲ ಬಿಡು ಅನ್ಕೊಂಡೆ.. ಆದರೆ ಯಾವಾಗ ಅವ್ನು ಅವರ ತಂದೆ ಕಾಲವಾಗಿದ್ದು ಹಾಗು ಅಮ್ಮನ್ನ ಬಿಟ್ಟು ಬೇರೆ ಊರಲ್ಲಿ ಸೆಟ್ಲ್ ಆಗ್ತೀನಿ ಅಂದ್ನೋ, ಒಂದು ಕ್ಷಣ ಬಹಳ ಕೋಪ ಬಂತು.. ಈ ಟೈಮಲ್ಲಿ ಅಮ್ಮ-ಅಕ್ಕನ್ನ ಬಿಟ್ಟು ಹೋಗ್ತಿನಿ ಅಂತ ಎಷ್ಟು ಆರಾಮಾಗಿ ಹೇಳಿದ್ನಲ್ಲ.. ಹೇಗೆ ಮನಸ್ಸು ಬಂತು ಇವ್ನಿಗೆ.. ಅದೂ ಅಲ್ದೇ ಗುಜರಾತ್ ಗೆ ಹೋಗಿ ಸೆಟ್ಲ್ ಆಗ್ತಾನಂತೆ.. ನಾವೆಲ್ಲಾ ನಮ್ಮೂರೇ ಸ್ವರ್ಗ ಅಂತ ನಂಬ್ಕೊಂಡೋರು.. ಈಗ್ಲೂ ನಂಗೆ ಟ್ರಾನ್ಸ್ಫ಼ರ್ ಸಿಕ್ಕ್ರೆ ಮೊದಲು ರೈಟ್ ಹೇಳೋಣ ಅಂತ ಕಾಯ್ತಿದ್ದೀನಿ.. ಹೆಂಗೆಲ್ಲಾ ಇರ್ತಾರೋ ಜನಗಳು ಅಂತ ಒಂದು ಕನ್ಕ್ಲೂಷನ್ ಗೆ ಬರೋಷ್ಟರಲ್ಲಿ ಮನೆಗೆ ಬಂದೆ.. ಊಟ ಮುಗಿಸಿ ಮಲಗೋ ಟೈಮಲ್ಲಿ ಮತ್ತೆ ನೆನಪಾಯ್ತು.. ನಾನು ಈ ವಿಚಾರವಾಗಿ ಅಥವಾ ಆ ಹುಡುಗನ ಬಗ್ಗೆ ಆಗಲಿ ಏನೇ ಯೋಚನೆ ಮಾಡಿ ಎಷ್ಟೇ ಅನಲೈಸ್ ಮಾಡಿದ್ದರು, ಅದು ನನ್ನ ಜೀವನದ ಅಥವಾ ಜೀವಿತಾವಧಿಯಲ್ಲಿ ನನಗಾದ ಅನುಭವ ಹಾಗೂ ಸುತ್ತಲಿನ ಪರಿಸರದಿಂದ ಪ್ರೇರೇಪಿತವಾದ ಅಂತಿಮ ಅಭಿಪ್ರಾಯ.. ಅದು ನನ್ನ ಮಟ್ಟಿಗೆ ಸರಿ ಇರಬಹುದು.. ಆದರೆ ಅವನು ಮಾಡ್ತಿರೋದು ತಪ್ಪಾ-ಸರೀನಾ ಅಂತ ಅವನ ಸ್ಥಾನದಲ್ಲಿ ನಿಂತು ನೋಡಿದಾಗ ಅವನ ಅಭಿಪ್ರಾಯ ಕೂಡ ನಮ್ಮಂತೆಯೇ ಅವನು ಬೆಳೆದ ಪರಿಸರ ಹಾಗು ಅನುಭವಗಳ ಮೇಲೆ ಅವಲಂಬಿತ.. ಹೀಗೆ ಒಬ್ಬೊಬ್ಬರ ದೃಷ್ಟಿಕೋನದಿಂದ ನೋಡಿದಾಗ ಒಬ್ಬೊಬ್ಬರ ಪರಿಸ್ಥಿತಿ ಹಾಗು ನಿರ್ಧಾರಗಳು ಸರಿ ಅಥವಾ ತಪ್ಪು ಅಂತ ಅನ್ಸುತ್ತೆ.. ಆದರೆ ಅದೆ ಅಂತಿಮ ಅಲ್ಲ.. ಯಾಕಂದ್ರೆ ನನ್ನ ಫ್ರೆಂಡ್ ಒಬ್ಬ ಹೇಳಿದ ಹಾಗೆ "ಲೈಫ್ ಇಸ್ ಸಿಂಪಲ್, ಆ್ಯಂಡ್ ಸಿಂಪಲ್ ಇಸ್ ಕಾಂಪ್ಲಿಕೇಟಡ್".. ನಮ್ಮ ಲೈಫಲ್ಲಿ ಯಾವಾಗ ಏನಾಗುತ್ತೋ, ಅದರ ಮೇಲೆ ನಮ್ಮ ಅಭಿಪ್ರಾಯಗಳು ಬೇರೂರಿತ್ತದೆ ಅಂತ ನನ್ನ ಅಭಿಪ್ರಾಯ.. ಅಂದ್ಹಾಗೆ ನಿಮ್ಮ ಅಭಿಪ್ರಾಯ ದಯವಿಟ್ಟು ತಿಳಿಸಿ..
ತುಂಬಾ ಸೀರಿಯಸ್ ವಿಷಯ ಹಿಡ್ಕೊಂಡು ಬೋರ್ ಹೊಡ್ಸಿದ್ದರೆ ಅದೂ ಕೂಡ ನಿಮ್ಮ ಅಭಿಪ್ರಾಯನೇ.. ಮರೆಯದೆ ತಿಳಿಸಿ..

Thursday, 25 January 2018

ಉಳಿತಾಯ

ಕೆಲವೊಂದು ಸಲ, ಸ್ವಲ್ಪ ಉಳಿಸಬೇಕು ಅಂತ ಅನ್ಕೊಂಡು ಜಾಸ್ತಿನೇ ವೇಸ್ಟ್ ಮಾಡ್ತೀವಿ.. ನಾನು ಬರಿತಾ ಇರೋ ಈ ಆರ್ಟಿಕಲ್ ಗೂ ಮೇಲೆ ಹೇಳಿದ ಡೈಲಾಗ್ ಗೂ ಯಾವುದೇ ಸಂಬಂಧ ಸಿಗೊಲ್ಲ.. ಸುಮ್ನೆ ಬಾಯಿಗೆ ಬಂತು ಅಂತ ಹೇಳ್ದೆ.. ಒಂದು ಚಿಕ್ಕ ಘಟನೆನ ಸೀರಿಯಲ್ ಥರ ಎಷ್ಟ್ ಆಗುತ್ತೋ ಅಷ್ಟು ಎಳಿಯಣ ಅಂತ ಅನ್ಕೊಂಡೆ.. ಸಾಕು ಮುಖ್ಯ ವಿಷಯಕ್ಕೆ ಬರ್ತಿನಿ..
ನಂಗೂ ನಾನ್-ವೆಜ್ ಊಟಕ್ಕೂ ಎಷ್ಟೋ ಜನ್ಮದ ನಂಟು.. ನನ್ನ ಬಗ್ಗೆ ಗೊತ್ತಿರೋರನ್ನ ಕೇಳಿದ್ದ್ರೆ ಪುರಾಣನೇ ಹೇಳ್ತಾರೆ, ಹೀಗೆ ಒಂದು ದಿನ ಆಫೀಸ್ ಕೆಲಸ ಲೇಟಾಗಿ ಮುಗಿಸಿ ಮನೆಗೆ ಹೊಗ್ತಾ ಇದ್ದೆ, ಯಾಕೋ ಪ್ರಶಾಂತ್ ಹೋಟೆಲ್‌(ರಾಜಾಜಿನಗರದಲ್ಲಿ ಫೇಮಸ್) ನೆನಪಾಯ್ತು (ಅದು ಮಾಮೂಲಿನೆ ಬಿಡಿ), ರೂಮ್ ಮೇಟ್ಸ್ ಯಾರು ಇರಲ್ಲಿಲ್ಲ.. ಅದಕ್ಕೆ "ಒಬ್ಬನೆ ಒಬ್ಬನೇ ಮಂಜುನಾಥನೊಬ್ಬನೇ" ಅಂತ ಹಾಡ್ ಹೇಳ್ಕೊಂಡು ಹೋಟೆಲ್‌ ಗೆ ಹೋದೆ.. ಎರಡು ಚಪಾತಿ, ಎಗ್-ಬೋಟಿ ಫ್ರೈ ಹೇಳಿದೆ.. ಒಳ್ಳೆ ಕಾಂಬಿನೇಷನ್.. ಸಕ್ಕತ್ತಾಗಿತ್ತು.. ಈಗ್ಲೂ ಬಾಯಲ್ಲಿ ನೀರು..
ಊಟ ಮುಗಿಸಿ ಹೊರಟಾಗ ರಾತ್ರಿ ಸುಮಾರು ೮.೩೦.. ನೆಡ್ಕೊಂಡು ಹೋಗ್ಲಾ ಅಥವಾ ಬಸ್ ಅಲ್ಲಿ  ಹೋಗ್ಲಾ ಅಂತ ಯೋಚನೆ ಮಾಡ್ತಿದ್ದೆ, ಅಷ್ಟೊತ್ತಿಗೆ ಕೆ.ಆರ್ ಮಾರುಕಟ್ಟೆ ಗೆ ಹೋಗೋ ೭೭ ಬಸ್ಸು ನವರಂಗ್ ಸಿಗ್ನಲ್ ಅಲ್ಲಿ ನಿಂತಿತ್ತು.. ಹೋಗಿ ಹತ್ತ್ಕೊಂಡೆ..
ಇಡೀ ಬಸ್ ಖಾಲಿ, ಲೇಡಿ ಕಂಡಕ್ಟರ್ ಫೋನಲ್ಲಿ ಮಾತಡ್ತಾ ಮುಂದೆ ಕೂತಿದ್ದ್ರು, ಖಾಲಿ ಇದ್ಯಲ್ಲಾ ಅಂತ "ಹಿರಿಯ ನಾಗರಿಕರಿಗೆ" ಸೀಟಲ್ಲಿ ಕೂತ್ಕೊಂಡೆ.. ಒಂದು ಸ್ಟಾಪ್ ಬಂತು,ಇನ್ನೂ ಟಿಕೆಟ್ ಕೇಳಿಲ್ಲ.. ನಾನೆ ಸನ್ನೆ ಮಾಡ್ದೆ, ಮನಸಲ್ಲೆ (ಫೋನಲ್ಲಿ) ಬಯ್ಯ್ಕೊಂಡು ಇ.ಎಸ್.ಐ ಗೆ ಟಿಕೆಟ್ ಕೊಟ್ರು.. ಯಾವಾಗಲೂ ರಷ್ ಇರೋ ಬಸ್ಸು ಯಾಕೆ ಖಾಲಿ ಹೊಡಿತಿದೆ ಅಂತ ಅನ್ಕೊಂಡು, ಕಂಡಕ್ಟರ್ ನ ಕೇಳಿದೆ, "ಏನ್ ಮೇಡಮ್ ಫುಲ್ ಖಾಲಿ ಹೊಡಿತಿದೆ ಬಸ್ಸು",
ಅವ್ರು : ಮುಂದೆ ಇದೇ ರೂಟ್ ನ ಇನ್ನೊಂದು ಗಾಡಿ ಹೋಗ್ತಿದೆ ಸರ್ ಅದಕ್ಕೆ..
ನಾನು: ಸುಮ್ನೆ ಎಷ್ಟು ಡೀಸೆಲ್ ವೇಸ್ಟ್ ಅಲ್ವಾ ಮೇಡಮ್.. ಮಾಮೂಲಿ ಡೀಸೆಲಾ ಅಥವಾ ಬಯೋ-ಡೀಸೆಲಾ..??
ಅವ್ರು: ಮಾಮೂಲಿ ಡೀಸೆಲ್ಲೇ ಸರ್, ನಮ್ಮ್ ಟ್ರಿಪ್ ನಾವ್ ಮುಗ್ಸಬೇಕು ಅಷ್ಟೇ.. ದೊಡ್ಡೋರು ಎಷ್ಟೆಷ್ಟೋ ವೇಸ್ಟ್ ಮಾಡ್ತಾರೆ, ನಾವು ಡ್ಯೂಟಿ ಮಾಡ್ತದ್ದಿವಿ ಅದ್ರಲ್ಲೇನು ತಪ್ಪು ಸರ್.. ಒಂದು ರಜಕ್ಕೆ ಅಥವಾ ಒಂದು ರೂಟ್ ಗೆ ಹಾಕ್ಸಕೋಬೇಕಂದ್ರೆ ಎಷ್ಟು ದುಡ್ಡು ಕೊಡ್ಬೇಕು..ಅಂತವ್ರ್ನೆಲ್ಲ ಹಿಡಿಯಲ್ಲ ನಮ್ಮೋರು, ಯಾರೋ ಪಾಪ ಐದು ರುಪಾಯಿ ಟಿಕೆಟ್ ಗೆ ಮೂರು ರುಪಾಯಿ ಕೊಡೋ ಬಡವನ್ನ ಹಿಡಿತಾರೆ.. ಹೋಗ್ಲಿ ಬಿಡಿ.. ಈಗ ಈ ಟ್ರಿಪ್ ಮುಗ್ಸಿ ಮನೆಗೆ ಹೋಗೋಷ್ಟ್ರಲ್ಲಿ ರಾತ್ರಿ ಹತ್ತೂವರೆ ಆಗುತ್ತೆ, ಊಟ ಮಾಡಿ ಮಲಗೊವಾಗ ಹನ್ನೆರಡು ಗಂಟೆ.. ಮತ್ತೆ ಬೆಳಗ್ಗೆ ಐದೂವರೆ ಟ್ರಿಪ್ ಗೆ ರೆಡಿ ಇರ್ಬೇಕು, ಎಷ್ಟೋ ಸಲ ಗಂಡ-ಮಕ್ಕಳ ಮುಖಾನೂ ನೊಡೊಕಾಗಲ್ಲ..
ನಾನು: ಹೋಗ್ಲಿ ಬಿಡಿ ಮೇಡಮ್ ಕಷ್ಟಪಟ್ಟು ದುಡಿತಿದ್ದಿರಾ, ಎಲ್ಲಾ ಒಳ್ಳೆಯದೇ ಆಗುತ್ತೆ..
ಇಷ್ಟು ಮಾತಾಡೊಷ್ಟ್ರಲ್ಲಿ ಸ್ಟಾಪ್ ಬಂತು, ಆ ಲೇಡಿ ಕಂಡಕ್ಟರ್ ಗೆ ಒಂದು ನಮಸ್ಕಾರ ಹಾಕಿ ಮನೆ ಕಡೆಗೆ ಹೊರಟೆ..
ಎಷ್ಟೋ ಸಲ ನಾವು ಯಾರಿಗಾದ್ರು ಸಜೆಷನ್ಸ್ ಕೊಡ್ತೀವಿ.. ಆದರೆ ಅದರ ಇನ್ನೊಂದು ಆಯಾಮ ನಮಗೆ ಗೊತ್ತಿರೊಲ್ಲ.. ಇಲ್ಲಿ ಅವ್ರು ಮಾಡಿದ್ದು ಡೀಸೆಲ್‌ ವೇಸ್ಟ್‌ ಅಂತ ನಂಗೆ ಅನ್ಸುತ್ತೆ, ಆದ್ರೆ ಅದೆ ಅವರ ಕೆಲಸ.. ಅವ್ರ ಕೆಲಸ ಅವ್ರು ಮಾಡುದು ಯಾವ್ದೇ ರೀತಿ ವೇಸ್ಟ್ ಅಲ್ಲ ಅಂತ ಯೋಚನೆ ಮಾಡ್ತಾ ಇದ್ದೆ, ಮನೆ ಬಂದಿದ್ದೆ ಗೊತ್ತಾಗ್ಲಿಲ್ಲ...